ಎನ್ನೆಂಸಿಯಲ್ಲಿ ರಾಷ್ಟ್ರಮಟ್ಟದ ಕಾಮರ್ಸ್ ಫೆಸ್ಟ್ “ಕಾಮ್ ಇನ್ ಸ್ಟಾನಿಯ 2K22” ಕಾರ್ಯಕ್ರಮ

ಶೇರ್ ಮಾಡಿ

ನೇಸರ ಸೆ.02: ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಕಾಲೇಜಿನ ವಾಣಿಜ್ಯ ವಿಭಾಗದಿಂದ ರಾಷ್ಟ್ರಮಟ್ಟದ ಕಾಮರ್ಸ್ ಫೆಸ್ಟ್ “ಕಾಮ್ ಇನ್ ಸ್ಟಾನಿಯ 2K22” ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ (ರಿ)ಸುಳ್ಯ, ಇದರ ಖಜಾಂಚಿಯವರಾದ ಶ್ರೀಮತಿ ಶೋಭಾ ಚಿದಾನಂದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳು ತಮ್ಮಲ್ಲಿರುವ ಕೀಳರಿಮೆಯಿಂದ ಹೊರಬಂದು, ತಮ್ಮ ಪ್ರತಿಭೆಯ ಮೂಲಕ ಎಲ್ಲಿ ಬೇಕಾದರೂ ಬದುಕು ಕಟ್ಟಿಕೊಳ್ಳುವ ಸಾಮರ್ಥ್ಯ ಅವರಲ್ಲಿ ಇದೆ ಎಂದರು.

ಅತಿಥಿಯಾಗಿ ಭಾಗವಹಿಸಿದ್ದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಪದವಿ ಕಾಲೇಜಿನ ಆಂಗ್ಲಭಾಷಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಗೋವಿಂದ ಎನ್ ಎಸ್ ಮಾತನಾಡಿ ವಿದ್ಯಾ ಸಂಕೀರ್ಣದಲ್ಲಿ ಸಿಗುವ ಸವಲತ್ತುಗಳನ್ನು ಬಳಸಿಕೊಳ್ಳುವುದರೊಂದಿಗೆ ನಿಮ್ಮಲ್ಲಿರುವ ಕೌಶಲ್ಯಗಳೇ ನಿಮ್ಮ ಮುಂದಿನ ಭವಿಷ್ಯಕ್ಕೆ ದಾರಿದೀಪವಾಗುತ್ತದೆ ಎಂದರು.

ವೇದಿಕೆಯಲ್ಲಿ ಕಾಲೇಜಿನ ಶೈಕ್ಷಣಿಕ ಸಲಹೆಗಾರ ಪ್ರೊ. ಎಂ ಬಾಲಚಂದ್ರಗೌಡ, ಕಾಲೇಜಿನ ಪ್ರಾಂಶುಪಾಲ ರುದ್ರ ಕುಮಾರ್ ಎಂ ಎಂ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಹಾಗೂ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಶ್ರೀಮತಿ ರತ್ನಾವತಿ ಡಿ, ಫೆಸ್ಟ್ ನ ಸಂಚಾಲಕರಾದ ಶ್ರೀಮತಿ ಗೀತಾ ಶೆಣೈ ಹಾಗೂ ಶ್ರೀಮತಿ ದಿವ್ಯ ಟಿ ಎಸ್, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಫೆಸ್ಟ್ ನ ವಿದ್ಯಾರ್ಥಿ ಸಂಚಾಲಕರಾದ ಕು. ಕೌಶಲ್ಯ ಸ್ವಾಗತಿಸಿ, ಚಿಂತನ್ ಎಸ್ ರೈ ವಂದಿಸಿದರು. ರಜತ್ ಕುಮಾರ್ ಅತಿಥಿಗಳನ್ನು ಪರಿಚಯಿಸಿದರು. ಶಾನ್ಯಾ. ಪಿ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಕಾಲೇಜಿನ ಪಿಯುಸಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ 12 ತಂಡಗಳು ಭಾಗವಹಿಸಿ ಹಣಕಾಸು, ಕ್ವಿಜ್, ಫೋಟೋಗ್ರಫಿ, ಮಾರುಕಟ್ಟೆ, ಮಾನವ ಸಂಪನ್ಮೂಲ ಬಳಕೆ ಮೊದಲಾದವುಗಳನ್ನು ತಮ್ಮ ಜೀವನದಲ್ಲಿ ಯಾವ ರೀತಿ ಬಳಸಿಕೊಳ್ಳಬಹುದು ಎಂಬುದನ್ನು ತಿಳಿದುಕೊಂಡರು.
ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್(ರಿ), ಸುಳ್ಯ ಇದರ ಜತೆ ಕಾರ್ಯದರ್ಶಿ ಕೆ ವಿ ಹೇಮನಾಥ್ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಇಂತಹ ಕಾರ್ಯಕ್ರಮಗಳ ಅಗತ್ಯತೆ ಬಹಳಷ್ಟಿದೆ. ಇಲ್ಲಿ ಸಿಕ್ಕ ವಿಚಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದರು. ಮುಖ್ಯ ಅತಿಥಿಯಾಗಿ ಸಿ ಎ ಶ್ರೀನಿಧಿ ಸುಳ್ಯ ಭಾಗವಹಿಸಿದ್ದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ರುದ್ರ ಕುಮಾರ್ ಎಂ ಎಂ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಹಾಗೂ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಶ್ರೀಮತಿ ರತ್ನಾವತಿ ಡಿ, ಫೆಸ್ಟ್ ನ ಸಂಚಾಲಕರಾದ ಶ್ರೀಮತಿ ಗೀತಾ ಶೆಣೈ ಹಾಗೂ ಶ್ರೀಮತಿ ದಿವ್ಯ ಟಿ ಎಸ್, ಫೆಸ್ಟ್ ನ ವಿದ್ಯಾರ್ಥಿ ಸಂಚಾಲಕರಾದ ಕು. ಕೌಶಲ್ಯ, ಚಿಂತನ್ ಎಸ್ ರೈ ಉಪಸ್ಥಿತರಿದ್ದರು.
ವಿದ್ಯಾರ್ಥಿ ರಜತ್ ಕುಮಾರ್ ಸ್ವಾಗತಿಸಿ, ಕೌಶಲ್ಯ ಹೆಚ್ ವಿ ವಂದಿಸಿದರು. ಶಾನ್ಯಾ ಪಿ ಕಾರ್ಯಕ್ರಮ ನಿರೂಪಿಸಿದರು. ಅಬ್ದುಲ್ ಇಮಾದ್ ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿದರು.
ವಿವೇಕಾನಂದ ಪಿಯು ಕಾಲೇಜು ಸಮಗ್ರ ಚಾಂಪಿಯನ್ ಶಿಪ್ ಟ್ರೋಫಿಯನ್ನು ಪಡೆದುಕೊಂಡರೆ, ರನ್ನರ್-ಅಪ್ ಟ್ರೋಫಿಯನ್ನು ಸೈಂಟ್ ಫಿಲೋಮಿನಾ ಪದವಿಪೂರ್ವ ಕಾಲೇಜು ಪಡೆದುಕೊಂಡಿತ್ತು. ವಿವಿಧ ಕಾಲೇಜಿನಿಂದ ಆಗಮಿಸಿದ ಸ್ಪರ್ಧಿಗಳು ಫೆಸ್ಟ್ ಆಯೋಜನೆಯ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿದರು. ಕಾಲೇಜಿನ ಎಲ್ಲಾ ಉಪನ್ಯಾಸಕ ವೃಂದದವರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Leave a Reply

error: Content is protected !!