ಆನ್ಲೈನ್‌ ಸಾಲದ ಕಿರುಕುಳಕ್ಕೆ ಸಿಲುಕಿದ ಕುಟುಂಬ: ಮಕ್ಕಳಿಗೆ ವಿಷವಿಕ್ಕಿ, ದಂಪತಿ ಆತ್ಮಹತ್ಯೆ

ಶೇರ್ ಮಾಡಿ

ಮಕ್ಕಳಿಗೆ ವಿಷವುಣಿಸಿ ಬಳಿಕ ತಾವೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯ ಪ್ರದೇಶದ ಭೋಪಾಲ್‌ ನಲ್ಲಿ ಗುರುವಾರ ನಡೆದಿರುವುದು ವರದಿಯಾಗಿದೆ.
ನಗರದ ನೀಲ್ಬಾದ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಸ್ಥಳದಿಂದ ಆತ್ಮಹತ್ಯೆ ಪತ್ರ ಮತ್ತು ಸಲ್ಫೇಟ್ ಮಾತ್ರೆಗಳ ಪ್ಯಾಕೆಟ್ ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮೃತ ದಂಪತಿ ಖಾಸಗಿ ವಿಮಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮೃತ ಮಕ್ಕಳು 8 ಮತ್ತು 3 ವರ್ಷ ವಯಸ್ಸಿನವರು ಎಂದು ಎಸ್ಪಿ ಚಂದ್ರಪ್ರಕಾಶ್ ಪಾಂಡೆ ಅವರು ಹೇಳಿದ್ದಾರೆ.
ಲೋನ್‌ ಪಡೆದುಕೊಂಡಿದ್ದ ಅವರು, ಅದನ್ನು ಮರು ಪಾವತಿಸದೇ ಬೇರೆ ದಾರಿಯಿಲ್ಲದೆ ಈ ಹೆಜ್ಜೆಯನ್ನಿಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಪತ್ರದಲ್ಲಿ ಏನಿದೆ?
ನನಗೆ ಏನು ಮಾಡಬೇಕು ಏನು ಮಾಡಬೇಕೆನ್ನುವುದು ಅರ್ಥವಾಗುತ್ತಿಲ್ಲ. ನಮ್ಮ ಸುಂದರ ಕುಟುಂಬಕ್ಕೆ ಏನಾಯಿತೆಂದು ನನಗೆ ಗೊತ್ತಿಲ್ಲ. ನಾನು ಕುಟುಂಬ ಸದಸ್ಯರಲ್ಲಿ ಕ್ಷಮೆಯಾಚಿಸಲು ಬಯಸುತ್ತೇನೆ. ನನ್ನ ತಪ್ಪಿನಿಂದಾಗಿ ನನ್ನೆಲ್ಲ ಸಂಬಂಧಿಕರು ಬಹಳಷ್ಟು ಕಷ್ಟವನ್ನು ಅನುಭವಿಸಿದ್ದಾರೆ.
ನಾನು ನನ್ನ ಕುಟುಂಬದೊಂದಿಗೆ ತುಂಬಾ ಸಂತೋಷದಲ್ಲಿದ್ದೆ. ನನಗೆ ಯಾವ ಚಿಂತೆಯೂ ಇರಲಿಲ್ಲ. ಆದರೆ ಏಪ್ರಿಲ್‌ ನಲ್ಲಿ ಆನ್ಲೈನ್‌ ಜಾಬ್‌ ಬಗ್ಗೆ ನನಗೆ ಒಂದು ಮೆಸೇಜ್‌ ಬಂತು. ಆ ಬಳಿಕ ಟೆಲಿಗ್ರಾಮ್‌ ನಲ್ಲಿ ಹೀಗೆಯೇ ಮತ್ತೊಂದು ಮೆಸೇಜ್‌ ಬಂತು. ಹೆಚ್ಚುವರಿ ಹಣ ಮತ್ತು ನನ್ನ ಅಗತ್ಯಗಳಿಗಾಗಿ ಈ ಕೆಲಸವನ್ನು ಮಾಡಲು ಶುರು ಮಾಡಿದೆ. ಆರಂಭದಲ್ಲಿ ನಾನು ಈ ಕೆಲಸದಲ್ಲಿ ಸ್ವಲ್ಪ ಲಾಭವನ್ನು ಪಡೆದುಕೊಂಡೆ ಆದರೆ ಮುಂದೆ ಹೋಗಿ ಸಿಲುಕಿಕೊಂಡೆ. ಕೆಲಸದ ಹೊರೆಯಿಂದ ಹೂಡಿಕೆ ಮಾಡಿದ ಹಣವನ್ನು ನಾನು ಟ್ರ್ಯಾಕ್‌ ಮಾಡಲು ಆಗಿಲ್ಲ. ಆದರೆ ಕೆಲಸವನ್ನು ಪೂರ್ತಿಗೊಳಿಸಲು ನನಗೆ ಮತ್ತೆ ಮತ್ತೆ ಸಂದೇಶಗಳು ಬಂದವು. ಇದರಿಂದ ತಪ್ಪಿಸಿಕೊಳ್ಳಲು ನನಗೆ ಆಗಲೇ ಇಲ್ಲ. ನನ್ನ ಎಲ್ಲಾ ಹಣ ಖಾಲಿಯಾದ ಮೇಲೆ ಆ ಕಂಪೆನಿ ಲೋನ್‌ ತೆಗೆದುಕೊಳ್ಳಲು ಸಲಹೆ ನೀಡಿತ್ತು. ಆದರೆ ನಾನು ಆರಂಭದಲ್ಲಿ ಅದನ್ನು ನಿರಾಕರಿಸಿದೆ. ಆದರೆ ಕಂಪನಿಯ ಒತ್ತಾಯದ ಮೇರೆಗೆ ನಾನು ಸಾಲ ತೆಗೆದುಕೊಂಡೆ. ನಾನು ಈ ಕೆಲಸವನ್ನು ಆರಂಭಿಸುವ ಮುನ್ನ ವೆಬ್‌ ಸೈಟ್‌ ಗೆ ತೆರಳಿ ಕಂಪೆನಿಯ ಬಗ್ಗೆ ತಿಳಿದುಕೊಂಡೆ. ಅದೊಂದು ಇ-ಕಾಮರ್ಸ್ ಕಂಪನಿಯಾಗಿದೆ. ಆ ಕಂಪನಿಯು ಟಿ ಆರ್‌ ಪಿಗಾಗಿ ಕಾರ್ಯನಿರ್ವಹಿಸುತ್ತದೆ. ಇದು ಕೋವಿಡ್ ನಂತರ 2022 ರಲ್ಲಿ ಕೊಲಂಬಿಯಾದಲ್ಲಿ ಪ್ರಾರಂಭವಾಯಿತೆಂದು ತಿಳಿದುಕೊಂಡ ಬಳಿಕ ಅದಕ್ಕಾಗಿ ಕೆಲಸ ಮಾಡಲು‌ ಆರಂಭಿಸಿದೆ. ಆದರೆ ಅದು ಈ ರೀತಿಯಾಗಿ ಕೊನೆಗೊಳ್ಳುತ್ತದೆ ಅಂದುಕೊಂಡಿರಲಿಲ್ಲ. ನನ್ನ ಹೆಂಡತಿ ಸೇರಿದಂತೆ ನನ್ನ ಕುಟುಂಬದಲ್ಲಿ ಯಾರಿಗೂ ಈ ಕೆಲಸದ ಬಗ್ಗೆ ತಿಳಿದಿರಲಿಲ್ಲ. ನನ್ನ ಹೆಂಡತಿ ಯಾವ ತಪ್ಪನ್ನು ಮಾಡಬೇಡಿ ಎನ್ನುತ್ತಿದ್ದಳು. ನಾನು ಏನು ಮಾಡಿದ್ದೇನೆ ಎಂದು ನನಗೆ ಅರ್ಥವಾಗುತ್ತಿಲ್ಲ. ನಾನು ನಾಲ್ಕು ವರ್ಷಗಳ ಹಿಂದೆ ಕೆಲಸ ಮಾಡಿದ ಕಂಪನಿಯು ಮುಚ್ಚಲ್ಪಟ್ಟಿತು ಮತ್ತು ನನ್ನ ಕ್ರೆಡಿಟ್ ಅತ್ಯಂತ ಕೆಟ್ಟ ಸ್ಥಿತಿಯಲ್ಲಿದೆ.
ಆನ್‌ಲೈನ್ ವಂಚನೆಗೆ ಸಿಲುಕಿಕೊಂಡ ಬಳಿಕವೂ ನಾನು ಹೇಗಾದರೂ ಮಾಡಿ ಸಾಲವನ್ನು ತೀರಿಸುತ್ತೇನೆ ಎಂದು ಭಾವಿಸಿದ್ದೆ. ಸಾಲ ತೀರಿಸಲು ನನ್ನ ಮೇಲೆ ಒತ್ತಡ ಹಾಗೂ ಬೆದರಿಕೆ ಹಾಕಲಾಗುತ್ತಿತ್ತು. ಆ ಹಣವನ್ನು ನಾನು ನನಗಾಗಿ ಬಳಕೆ ಮಾಡಲಿಲ್ಲ. ಕಂಪೆನಿಯ ಹಣವನ್ನು ಕಂಪೆನಿಗಾಗಿಯೇ ಬಳಸಿದೆ.
ಇದಾದ ಬಳಿಕ ಜೂನ್‌ನಲ್ಲಿ, ಸಾಲದ ಹೊರೆ ಹೆಚ್ಚುತ್ತಲೇ ಹೋಯಿತು. ಸಾಲ ವಸೂಲಾತಿ ಏಜೆಂಟ್‌ಗಳು ನನಗೆ ಬೆದರಿಕೆ ಹಾಕಲು ಪ್ರಾರಂಭಿಸಿದರು. ಹೇಗಾದರೂ ಮಾಡಿ ನಾನು ಜೂನ್‌ನಲ್ಲಿ ಇಎಂಐ ಪಾವತಿಗೆ ವ್ಯವಸ್ಥೆ ಮಾಡಿದೆ. ಆದರೆ ಜುಲೈನಲ್ಲಿ, ಸಾಲದ ಏಜೆಂಟ್‌ಗಳು ನನ್ನ ಫೋನ್ ಅನ್ನು ಹ್ಯಾಕ್ ಮಾಡಿ, ಅದರ ವಿವರಗಳನ್ನು ಹೊರತೆಗೆದರು ಮತ್ತು ನನ್ನ ಸಂಬಂಧಿಕರು, ಸ್ನೇಹಿತರು ಮತ್ತು ಸಹೋದ್ಯೋಗಿಗಳನ್ನು ಬ್ಲ್ಯಾಕ್‌ಮೇಲ್ ಮಾಡಲು ಪ್ರಾರಂಭಿಸಿದರು. ನನ್ನ ಬಾಸ್‌ನ ಫೋಟೋವನ್ನು ಬಳಸಿ ಕೆಟ್ಟದಾಗಿ ಫಾರ್ವರ್ಡ್‌ ಮಾಡಿದರು. ನನ್ನ ತಪ್ಪಿನಿಂದಾಗಿ ನನ್ನ ಪರಿಚಯಸ್ಥರೆಲ್ಲರೂ ಬಳಲುತ್ತಿದ್ದಾರೆ. ಎಲ್ಲರನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ.
ಈ ಬಗ್ಗೆ ನಾನು ಸೈಬರ್ ಕ್ರೈಂ ಕಚೇರಿಗೆ ಹೋಗಿ ಅಧಿಕಾರಿಗಳಿಗೆ ಹೇಳಿದೆ. ಆದರೆ ಅಧಿಕಾರಿಗಳ ರಜೆಯಿಂದಾಗಿ ಪ್ರಕರಣದ ತನಿಖೆ ವಿಳಂಬವಾಯಿತು. ಈ ಸಂಬಂಧ ಅರ್ಜಿಯನ್ನು ಸಿದ್ಧಪಡಿಸಲು ನಾನು ವಕೀಲರನ್ನು ಭೇಟಿಯಾದೆ. ಆದರೆ ಅವರು ಕೂಡ ಸ್ವಲ್ಪ ಕಾಲಾವಕಾಶ ಕೇಳಿದರು. ಯಾರೊಂದಿಗೂ ಮಾತನಾಡಲು, ಯಾರನ್ನೂ ಭೇಟಿ ಮಾಡಲು ಆಗದ ಸ್ಥಿತಿಯಲ್ಲಿ ನಾನಿದ್ದೇನೆ.
ನಮ್ಮ ಮರಣೋತ್ತರ ಪರೀಕ್ಷೆ ನಡೆಯಬಾರದು ಮತ್ತು ಎಲ್ಲರ ಅಂತಿಮ ಸಂಸ್ಕಾರವನ್ನು ಒಟ್ಟಿಗೆ ನಡೆಸಬೇಕು, ಆದ್ದರಿಂದ ನಾವು ಒಟ್ಟಿಗೆ ಇರುತ್ತೇವೆ ಎಂಬುದು ನಮ್ಮ ಅಂತಿಮ ಆಶಯವಾಗಿದೆ ಎಂದು ಸುಧೀರ್ಘ ಪತ್ರವನ್ನು ಬರೆದಿದ್ದಾರೆ.

Leave a Reply

error: Content is protected !!