ಆಸ್ತಿ ಆಸೆಗೆ ಪತ್ನಿಯನ್ನೇ ಕೊಂದ ಶಿಕ್ಷಕ, ಸಹಜ ಸಾವೆಂದು ಬಿಂಬಿಸಲು ಹೋಗಿ ಜೈಲು ಸೇರಿದ

ಶೇರ್ ಮಾಡಿ

ಆಸ್ತಿ ಆಸೆಗೆ ಪತಿಯೇ ಪತ್ನಿಯ ಕೊಲೆ‌ ಮಾಡಲಾಗಿರುವ ಘಟನೆ ಮಂಡ್ಯದ ವಿವಿ ನಗರ ಬಡಾವಣೆಯಲ್ಲಿ ನಡೆದಿದೆ. ಮಂಡ್ಯದ ಖಾಸಗಿ‌ ಕಾಲೇಜಿನಲ್ಲಿ ಪ್ರಾಧ್ಯಪಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಹಣದ ದಾಹಕ್ಕೆ ಬಿದ್ದು ದಿಂಬು, ಬೆಡ್​ಶೀಟ್​​ನಿಂದ ಉಸಿರುಗಟ್ಟಿಸಿ ಪತ್ನಿಯನ್ನೇ ಕೊಲೆ ಮಾಡಿದ್ದಾನೆ. ಹತ್ಯೆ ಮಾಡಿ ಬಳಿಕ ಸಹಜ ಸಾವೆಂದು ನಾಟಕವಾಡಿದ್ದ, ಆದ್ರೆ ಈ ನಾಟಕ ಬಯಲಾಗಿದ್ದು ಹಂತಕ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಎಸ್.ಶೃತಿ(32) ಕೊಲೆಯಾದವರು, ಟಿ.ಎನ್.ಸೋಮಶೇಖರ್(41) ಬಂಧಿತ ಆರೋಪಿ.

ಮಂಡ್ಯದ ವಿವಿ ನಗರ ಬಡಾವಣೆಯಲ್ಲಿ ಆಸ್ತಿಗಾಗಿ ಸೋಮಶೇಖರ್ ತಮ್ಮ ಪತ್ನಿಯನ್ನೇ ಕೊಲೆ ಮಾಡಿದ್ದಾರೆ. ಶೃತಿ ಅವರು ಮಲಗಿದ್ದ ವೇಳೆ ಮುಖಕ್ಕೆ ದಿಂಬು, ಬೆಡ್ ಶೀಟ್ ನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ನಂತರ ಇದೊಂದು ಸಹಜ ಸಾವೆಂದು ಬಿಂಬಿಸುವ ಯತ್ನ ಮಾಡಿದ್ದಾರೆ. ಆದರೆ ಯತ್ನ ವಿಫಲವಾಗಿದ್ದು ಜೈಲು ಸೇರಿದ್ದಾರೆ. ಕೆಲ ವರ್ಷಗಳ ಹಿಂದೆ ಅನಾರೋಗ್ಯದಿಂದ ಶೃತಿ ಅವರ ತಂದೆ, ತಾಯಿ ಸಾವನ್ನಪ್ಪಿದ್ದರು. 2018ರಲ್ಲಿ ಅಪಘಾತದಲ್ಲಿ ಶೃತಿ ತಂಗಿ ಸುಶ್ಮಿತ ಕೂಡ ಮೃತಪಟ್ಟಿದ್ದರು. ಹೀಗಾಗಿ ಮೂವರ ಸಾವಿನ ಬಳಿಕ ಶೃತಿ ಹೆಸರಿಗೆ 10 ಕೋಟಿಗೂ ಹೆಚ್ಚು ಮೌಲ್ಯದ ಪ್ರಾಪರ್ಟಿ ವರ್ಗಾವಣೆಯಾಗಿತ್ತು. ಮೈಸೂರಿನ ಪ್ರಮುಖ ನಗರಗಳಲ್ಲಿದ್ದ ಕಮರ್ಷಿಯಲ್ ಬಿಲ್ಡಿಂಗ್ಸ್, ಮನೆ ಹಾಗೂ ಸೈಟ್‌ಗಳ ಮೇಲೆ ಆರೋಪಿ ಪತಿ ಸೋಮಶೇಖರನ ಕಣ್ಣು ಬಿದ್ದಿತ್ತು. ಆ ಆಸ್ತಿ ಮಾರಲು ಶೃತಿಗೆ ಒತ್ತಾಯಿಸುತ್ತಿದ್ದರು.

ಮಾರಾಟ ಮಾಡಿ ಬೇರೆಡೆ ಪ್ರಾಪರ್ಟಿ ಖರೀದಿಗೆ ಪ್ಲಾನ್‌ ಮಾಡಿದ್ದ. ಆದರೆ ಆಸ್ತಿ ಮಾರಾಟ ಮಾಡಲು ಶೃತಿ ನಿರಾಕರಿಸಿದ್ದರು. ಇದೇ ವಿಚಾರಕ್ಕೆ ಹಲವು ಬಾರಿ ಇವರಿಬ್ಬರ ನಡುವೆ ಜಗಳ ನಡೆದಿತ್ತು. ಕಳೆದ ಶನಿವಾರ ಶೃತಿ ಮಲಗಿದ್ದ ವೇಳೆ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ಪಲ್ಸ್ ರೇಟ್ ಕಮ್ಮಿಯಾಗಿ ಮಲಗಿದ್ದಲ್ಲೇ ಸಾವನ್ನಪ್ಪಿದ್ದಾಳೆಂದು ನಾಟಕವಾಡಿದ್ದಾನೆ. ಮೃತ ಶೃತಿ ಚಿಕ್ಕಪ್ಪನಿಗೆ ಕರೆ ಮಾಡಿ ಸಹಜ ಸಾವೆಂದು ತಿಳಿಸಿದ್ದಾನೆ. ಇದರಿಂದ ಅನುಮಾನಗೊಂಡ ಚಿಕ್ಕಪ್ಪ ಕುಮಾರಸ್ವಾಮಿ ಎಂಬುವವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅನುಮಾನಸ್ಪದ ಸಾವೆಂದು ದೂರು ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದು ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿಸಿ ಸಾಯಿಸಿರುವ ಸತ್ಯ ಬಯಲಾಗಿದೆ.

ಬಳಿಕ ಸೋಮಶೇಖರ್ ಬಂಧಿಸಿ ವಿಚಾರಣೆ ನಡೆಸಲಾಗಿದ್ದು ವಿಚಾರಣೆ ವೇಳೆ ತಾನೇ ಕೊಲೆ ಮಾಡಿರೋದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿ ಪತಿಯನ್ನ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮಂಡ್ಯದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

error: Content is protected !!
%d bloggers like this: