SORRY ಕೇಳುವಂತೆ ಯುವಕನ ಬಾಯಿಗೆ ಚಪ್ಪಲಿ ತುರುಕಿ ಹಲ್ಲೆಗೈದ ಮಹಿಳಾ ಉದ್ಯಮಿ & ಟೀಂ!

ಶೇರ್ ಮಾಡಿ

ದಲಿತ ಯುವಕನ ಮೇಲೆ ಹಲ್ಲೆ ಹಾಗೂ ಆತನ ಬಾಯಿಗೆ ಚಪ್ಪಲಿ ತುರುಕಿದ ಆರೋಪದ ಮೇಲೆ ಮಹಿಳಾ ಉದ್ಯಮಿ ಜೊತೆ 6 ಮಂದಿಯ ವಿರುದ್ಧ ಗುಜರಾತ್‍ನ ಮೊರ್ಬಿ ನಗರದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೃತ್ಯ ಎಸಗಿದ ಮಹಿಳಾ ಉದ್ಯಮಿಯನ್ನು ವಿಭೂತಿ ಪಟೇಲ್ ಅಕಾ ರಾಣಿಬಾ ಎಂದು ಗುರುತಿಸಲಾಗಿದೆ. ಈ ಸಂಬಂಧ ಸಂತ್ರಸ್ತ ನಿಲೇಶ್ ದಲ್ಸಾನಿಯಾ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ಮೊರ್ಬಿ ನಗರದ ಪೊಲೀಸರು ಇಂದು ಮಹಿಳೆ ವಿಭೂತಿ ಪಟೇಲ್ ಅಕಾ ರಾಣಿಬಾ ಮತ್ತು ಆಕೆಯ ಸಹೋದರ ಓಂ ಪಟೇಲ್ ಮತ್ತು ಮ್ಯಾನೇಜರ್ ಸೇರಿದಂತೆ ಇತರರ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ.

ವಿಭೂತಿ ಪಟೇಲ್ ಅಕಾ ರಾಣಿಬಾ ಕಂಪನಿಯಲ್ಲಿ 21 ವರ್ಷದ ದಲಿತ ಯುವಕ 15 ದಿನ ಕೆಲಸ ಮಾಡಿದ್ದನು. ಅಂತೆಯೇ ಆತ ಸಂಬಳಕ್ಕೆ ಬೇಡಿಕೆ ಇಟ್ಟಿದ್ದಕ್ಕಾಗಿ ಮಹಿಳಾ ಉದ್ಯಮಿಯು ಯುವಕನ ಬಾಯಿಗೆ ತುರುಕಿ ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದಾಳೆ. ಈ ಘಟನೆ ಬುಧವಾರ ನಡೆದಿದೆ.

ದೂರಿನಲ್ಲೇನಿದೆ..?:
ಕಳೆದ ಅಕ್ಟೋಬರ್‍ನಲ್ಲಿ ರಾಣಿ ಬಾ ಅವರು ತಮ್ಮ ಸಂಸ್ಥೆಗೆ ನಿಲೇಶ್ ದಲ್ಸಾನಿಯಾನನ್ನು ನೇಮಕ ಮಾಡಿಕೊಂಡಿದ್ದರು. ಅಂತೆಯೇ ಟೈಲ್ಸ್ ಮಾರ್ಕೆಟಿಂಗ್ ಕೆಲಸಕ್ಕಾಗಿ ನಿಲೇಶ್‍ನನ್ನು ನಿಯೋಜಿಸಲಾಗಿತ್ತು. ಆತನಿಗೆ 12 ಸಾವಿರ ರೂಪಾಯಿ ಸಂಬಳ ಕೊಡೋದಾಗಿ ಹೇಳಲಾಗಿತ್ತು. ಆದರೆ ಸಂಬಳವನ್ನೇ ಕೊಟ್ಟಿರಲಿಲ್ಲ ಎಂದು ಎಫ್‍ಐಆರ್ ನಲ್ಲಿ ವಿವರಿಸಲಾಗಿದೆ.

ಅಕ್ಟೋಬರ್ ಅಂತ್ಯದ ವೇಳೆಗೆ ನಿಲೇಶ್‍ನನ್ನು ಇದ್ದಕ್ಕಿದ್ದಂತೆಯೇ ಕೆಲಸದಿಂದ ಕಿತ್ತು ಹಾಕಿದ್ದರು. ಹೀಗಾಗಿ 16 ದಿನ ಕೆಲಸ ಮಾಡಿದ್ದು, ಅಷ್ಟು ದಿನಗಳ ವೇತನವನ್ನಾದರೂ ಕೊಡಿ ಎಂದು ನಿಲೇಶ್ ದಲ್ಸಾನಿಯಾ ಬೇಡಿಕೆ ಇಟ್ಟಿದ್ದರು. ಆದರೆ ಯುವಕ ಬೇಡಿಕೆಗೆ ರಾಣಿ ಬಾ ಕ್ಯಾರೇ ಎಂದಿಲ್ಲ. ಆತನ ಫೋನ್ ಕರೆಗಳನ್ನೂ ಸ್ವೀಕರಿಸುತ್ತಿರಲಿಲ್ಲ. ಇದರಿಂದ ಬೇಸತ್ತ ನಿಲೇಶ್ ದಲ್ಸಾನಿಯಾ ತಮ್ಮ ಸಹೋದರ ಮೇಹುಲ್ ಹಾಗೂ ನೆರೆ ಮನೆಯ ಭಾವೇಶ್ ಎಂಬಾತನ ಜೊತೆಗೆ ಕಳೆದ ಬುಧವಾರ ರಾಣಿಬಾ ಅವರ ಕಚೇರಿಗೆ ತೆರಳಿದ್ದ. ತಮ್ಮ ಸಂಬಳ ಕೊಡಿ ಎಂದು ಬೇಡಿಕೆ ಇಟ್ಟ. ಈ ವೇಳೆ ರಾಣಿಬಾ ತಮ್ಮ ಸಹೋದರ ಓಂ ಪಟೇಲ್ ಕರೆ ಮಾಡಿದರು.

ಆರೋಪಿ ಮಹಿಳಾ ಉದ್ಯಮಿ ರಾಣಿಬಾ, ಆಕೆಯ ಸಹೋದರ ಓಂ ಪಟೇಲ್, ಕಂಪನಿಯ ಮ್ಯಾನೇಜರ್ ಹಾಗೂ ಇತರ ಕಾರ್ಮಿಕರು ಸೇರಿಕೊಂಡು ಮೂವರಿಗೂ ಥಳಿಸಿದರು. ಕೊನೆಗೆ ನಿಲೇಶ್ ದಲ್ಸಾನಿಯಾ ಬಾಯಿಗೆ ತನ್ನ ಚಪ್ಪಲಿ ತಿರುಕಿದ ರಾಣಿಬಾ ಕ್ಷಮೆ ಕೇಳುವಂತೆ ಆಗ್ರಹಿಸಿದರು. ಇಷ್ಟು ಮಾತ್ರವಲ್ಲದೆ ಮೂವರನ್ನೂ ತಮ್ಮ ವಾಣಿಜ್ಯ ಕಟ್ಟಡದ ಟೆರೇಸ್‍ಗೆ ಎಳೆದೊಯ್ದು ಅಲ್ಲಿಯೂ ಹಿಗ್ಗಾಮುಗ್ಗ ಥಳಿಸಿದರು ಎಂದು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಇದೀಗ ಆರು ಮಂದಿ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.

Leave a Reply

error: Content is protected !!