

ನೆಲ್ಯಾಡಿ: ನೆಲ್ಯಾಡಿ ಲಹರಿ ಸಂಗೀತ ಕಲಾ ಕೇಂದ್ರದ 3ನೇ ವರ್ಷದ ವಾರ್ಷಿಕೋತ್ಸವ “ರಾಗಾಂತರಂಗ” ಕಾರ್ಯಕ್ರಮ ಏ.27 ರಂದು ಸಂಜೆ 6:30ಕ್ಕೆ ನೆಲ್ಯಾಡಿ ದುರ್ಗ ಶ್ರೀ ಟವರ್ಸ್ ಬಳಿ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಕೊಣಾಲು ತಿರ್ಲೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಧರ್ಮದರ್ಶಿ ಮಾಧವ ಸರಳಾಯ ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದುರ್ಗಾ ಶ್ರೀ ನೆಲ್ಯಾಡಿಯ ಸತೀಶ್ ಕೆ.ಎಸ್ ವಹಿಸಲಿದ್ದಾರೆ. ಅಭ್ಯಾಗತರಾಗಿ ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ಪಾಲೇರಿ, ಪುತ್ತೂರು ಪಿ ಎಲ್ ಡಿ ಬ್ಯಾಂಕಿನ ಅಧ್ಯಕ್ಷ ಭಾಸ್ಕರ ಎಸ್ ಗೌಡ ಇಚ್ಚಂಪಾಡಿ, ನೆಲ್ಯಾಡಿ ಜೇಸಿಐ ಅಧ್ಯಕ್ಷ ಡಾ. ಸುಧಾಕರ್ ಹಾಗೂ ಕಾಮಧೇನು ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಶ್ರೀಮತಿ ಉಷಾ ಅಂಚನ್ ಭಾಗವಹಿಸಲಿದ್ದಾರೆ.
ಈ ಸಂದರ್ಭ ಪುತ್ತೂರು ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ನೃತ್ಯಗುರು ವಿದ್ವಾನ್ ಗಿರೀಶ್ ಕುಮಾರ್ ಅವರಿಗೆ “ಲಹರಿ ಸಾಧಕರತ್ನ” ಪ್ರಶಸ್ತಿ ಪ್ರದಾನ ಮಾಡಲಾಗುವುದು. ಜೊತೆಗೆ, ನೆಲ್ಯಾಡಿ ಆದರ್ಶ ಶಾಮಿಯನದ ಮಾಲಕ ದಿನಕರ ಕೆ.ಎಚ್, ಬೆಳ್ಳಾರೆ ಕಲಾ ಮಂದಿರದ ನಿರ್ದೇಶಕ ಪ್ರಮೋದ್ ಕುಮಾರ್, ಹಾಗೂ ನೆಲ್ಯಾಡಿ ಜ್ಯೋತಿರ್ವೈದ್ಯ ಹೋಮಿಯೋಪತಿ ಚಿಕಿತ್ಸಾಲಯದ ಡಾ.ಅನೀಶ್ ಕುಮಾರ್ ಸಾದಂಗಾಯ ಅವರನ್ನು ವಿಶೇಷ ಸನ್ಮಾನಿಸಲಾಗುವುದು.
ಸಭಾ ಕಾರ್ಯಕ್ರಮಗಳ ನಂತರ ಪ್ರಶಸ್ತಿ ಪುರಸ್ಕೃತ ವಿ.ಕೆ ಜೋಡಿ ತಾರೆ ಕರ್ನಾಟಕ ಪ್ರಶಸ್ತಿ ಪುರಸ್ಕೃತ ಕೃಷ್ಣರಾಜ್ ಸುಳ್ಯ ಅವರ ನಿರೂಪಣೆಯಲ್ಲಿ ಕಲಾ ಕೇಂದ್ರದ ವಿದ್ಯಾರ್ಥಿಗಳಿಂದ ಕೀಬೋರ್ಡ್ ವಾದನ, ಸುಗಮ ಸಂಗೀತ ಮತ್ತು ನೃತ್ಯ ಕಾರ್ಯಕ್ರಮ ಜರುಗಲಿದೆ ಎಂದು ಸಂಗೀತ ಗುರು ವಿಶ್ವನಾಥ ಶೆಟ್ಟಿ ಕೆ. ಮಾಹಿತಿ ನೀಡಿದರು.













