

ರಾಮಕುಂಜ: ನವೋದಯ ಕಾಲದ ಖ್ಯಾತ ಕವಿ, ಬರಹಗಾರ, ಸಾಹಿತ್ಯ ಸಂಸ್ಕೃತಿಯ ಶ್ರೇಷ್ಠ ಶಿಲ್ಪಿ ಇತ್ತೀಚೆಗೆ ನಿಧನರಾರಾದ ಎಚ್ ಎಸ್ ವೆಂಕಟೇಶಮೂರ್ತಿ ಅವರನ್ನು ಸ್ಮರಿಸಿ ಕನ್ನಡ ಸಾಹಿತ್ಯ ಪರಿಷತ್ ಕಡಬ ತಾಲೂಕು ಘಟಕದ ವತಿಯಿಂದ ನುಡಿ ನಮನ ಕಾರ್ಯಕ್ರಮವು ರಾಮಕುಂಜದಲ್ಲಿ ನೆರವೇರಿತು.
ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕಡಬ ಘಟಕದ ಅಧ್ಯಕ್ಷ ಕೆ. ಸೇಸಪ್ಪ ರೈ ಅವರು ನುಡಿನಮನ ಅರ್ಪಿಸಿ, “ಎಚ್ ಎಸ್ ವೆಂಕಟೇಶಮೂರ್ತಿ ಅವರು ಕನ್ನಡ ಸಾಹಿತ್ಯ ಕ್ಷೇತ್ರವನ್ನು ಹಳೆಯ ಸಂಪ್ರದಾಯದಲ್ಲಿ ಕೃಷಿ ಮಾಡಿ ಆಧುನಿಕ ಸಾಹಿತ್ಯದ ಕೃತಿಗಳನ್ನು ಸಾಹಿತ್ಯ ಪ್ರಿಯರಿಗೆ ಕೊಟ್ಟ ಮಹಾನ್ ಲೇಖಕರು ಅವರ ಅಗಲಿಕೆಯು ಕನ್ನಡ ಸಾರಸ್ವತ ಲೋಕದ ಅಮೂಲ್ಯ ಕೊಂಡಿಯೊಂದು ಕಳೆದುಹೋದಂತಾಗಿದೆ” ಸಂತಾಪ ಸೂಚಿಸಿದರು.
ಕಾರ್ಯಕ್ರಮದಲ್ಲಿ ಕಸಾಪ ನಿಕಟ ಪೂರ್ವ ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲು, ಹೋಬಳಿ ಘಟಕದ ಅಧ್ಯಕ್ಷ ಪದ್ಮಪ್ಪ ಗೌಡ, ಗೌರವ ಕಾರ್ಯದರ್ಶಿಗಳು ಎನ್.ಕೆ. ನಾಗರಾಜ್ ಹಾಗೂ ವಸಂತ್ ಕುಮಾರ್ ಡಿ, ಕೋಶಾಧಿಕಾರಿ ಬಾಲಚಂದ್ರ ಮುಚ್ಚಿಂತಾಯ, ಘಟಕ ಕಾರ್ಯದರ್ಶಿ ಕಿಶೋರ್ ಕುಮಾರ್ ಬಿ, ಮತ್ತು ಸದಸ್ಯರಾದ ವೆಂಕಟರಮಣ ಭಟ್, ಯಶವಂತ ರೈ, ಎ.ಎನ್ ಕೊಳಂಬೆ, ರಮೇಶ್ ಕೋಟೆ, ಪ್ರೇಮ ಅವರು ಉಪಸ್ಥಿತರಿದ್ದು ನುಡಿನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಊರಿನ ಸಾಹಿತ್ಯಾಭಿಮಾನಿಗಳು ಪಾಲ್ಗೊಂಡಿದ್ದರು.










