ನೆಲ್ಯಾಡಿಗೆ ಪೂರ್ಣ ಪ್ರಮಾಣದ ಪೊಲೀಸ್ ಠಾಣೆ ರಚನೆಗೆ ಒತ್ತಾಯ – 15 ಗ್ರಾಮಗಳ ಒಳಗೊಂಡು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ಒಮ್ಮತದ ನಿರ್ಧಾರ

ಶೇರ್ ಮಾಡಿ

ನೆಲ್ಯಾಡಿ: ನೆಲ್ಯಾಡಿ ಹೊರಠಾಣೆಯನ್ನು ಪೂರ್ಣ ಪ್ರಮಾಣದ ಪೊಲೀಸ್ ಠಾಣೆಯಾಗಿ ಪರಿವರ್ತಿಸಲು ಮತ್ತು ಮೌಲ್ಯದ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲು ಜುಲೈ 26ರಂದು ಸಂಜೆ ಕೌಕ್ರಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಒಮ್ಮತದ ಅಭಿಪ್ರಾಯ ವ್ಯಕ್ತವಾಯಿತು. ಉಪ್ಪಿನಂಗಡಿ ಪೊಲೀಸರು ಸಂಘಟಿಸಿದ ಈ ಸಭೆಯಲ್ಲಿ ನೆಲ್ಯಾಡಿ ಮತ್ತು ಸುತ್ತಮುತ್ತಲಿನ 15 ಗ್ರಾಮಗಳ ಪ್ರತಿನಿಧಿಗಳು, ಗ್ರಾಮಸ್ಥರು, ಸಂಘಟನೆಗಳ ಮುಖಂಡರು ಪಾಲ್ಗೊಂಡು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಇತ್ತೀಚೆಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸಿದ್ದ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರಿಗೆ, ಕಡಬ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯೆ ಉಷಾ ಅಂಚನ್ ಅವರು, ನೆಲ್ಯಾಡಿಯ ಹೊರಠಾಣೆಯನ್ನು ಪೂರ್ಣ ಪ್ರಮಾಣದ ಠಾಣೆಯಾಗಿ ಪರಿವರ್ತಿಸಲು ಬೇಡಿಕೆಯನ್ನು ಮುಂದಿಟ್ಟು ಮನವಿ ಸಲ್ಲಿಸಿದ್ದರು. ಈ ಕುರಿತು ಸ್ಪಂದಿಸಿದ ಗೃಹ ಸಚಿವರು, ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಿದ್ದರು. ಈ ಹಿನ್ನಲೆಯಲ್ಲಿ ಉಪ್ಪಿನಂಗಡಿ ಪೊಲೀಸರು ಕೌಕ್ರಾಡಿಯಲ್ಲಿ ಸಾರ್ವಜನಿಕ ಸಭೆ ನಡೆಸಿದರು.

15 ಗ್ರಾಮಗಳ ವ್ಯಾಪ್ತಿ ವಿಸ್ತೃತ:
ಪ್ರಸ್ತುತ ನೆಲ್ಯಾಡಿ ಹೊರಠಾಣೆಯ ವ್ಯಾಪ್ತಿಗೆ ನೆಲ್ಯಾಡಿ, ಕೊಣಾಲು, ಕೌಕ್ರಾಡಿ, ಇಚ್ಲಂಪಾಡಿ, ಕೊಣಾಜೆ, ಶಿರಾಡಿ, ಸಿರಿಬಾಗಿಲು ಗ್ರಾಮಗಳು ಸೇರಿವೆ. ಈ ಹೊರಠಾಣೆಯನ್ನು ವಿಸ್ತರಿಸಿ, ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಆಲಂತಾಯ, ಗೋಳಿತ್ತೊಟ್ಟು, ಧರ್ಮಸ್ಥಳ ಠಾಣಾ ವ್ಯಾಪ್ತಿಯ ರೆಖ್ಯ, ಶಿಬಾಜೆ, ಶಿಶಿಲ, ಕೊಕ್ಕಡ, ಹತ್ಯಡ್ಕ ಹಾಗೂ ಕಡಬ ಠಾಣಾ ವ್ಯಾಪ್ತಿಯ ಬಲ್ಯ ಗ್ರಾಮ ಸೇರಿ ಒಟ್ಟು 15 ಗ್ರಾಮಗಳನ್ನು ಒಳಗೊಂಡಂತೆ ಹೊಸ ಪೊಲೀಸ್ ಠಾಣೆ ಸ್ಥಾಪನೆಯ ಪ್ರಸ್ತಾವನೆ ಸಿದ್ಧಪಡಿಸಲು ಸಭೆಯಲ್ಲಿ ಒಮ್ಮತವಾಯಿತು.

ಸ್ಥಳೀಯ ಸಮಸ್ಯೆಗಳು – ಶ್ರೇಣಿಪೂರ್ವ ಅಗತ್ಯತೆ:
ಈ ಭಾಗದಲ್ಲಿ ಹಲವು ಕ್ರಿಮಿನಲ್ ಪ್ರಕರಣಗಳು, ಭಾರೀ ವಾಹನ ಸಂಚಾರದಿಂದ ಸಂಭವಿಸುವ ಅಪಘಾತಗಳು, ಕಳ್ಳತನ, ಆನೆ ಹಾಗೂ ಕಾಡು ಪ್ರಾಣಿಗಳ ದಾಳಿ, ಗುಡ್ಡ ಕುಸಿತ, ಕಾಡು ಪ್ರದೇಶಗಳಲ್ಲಿ ಪತ್ತೆಯಾಗುವ ಶವ ಪ್ರಕರಣಗಳು, ಸಿರಿಬಾಗಿಲು–ಶಿಶಿಲ ಪ್ರದೇಶಗಳಲ್ಲಿ ನಕ್ಸಲ್ ಚಟುವಟಿಕೆ ಇತ್ಯಾದಿ ಹಿನ್ನೆಲೆಗಳಿದ್ದು, ಇದು ಪೂರಕ ಪೊಲೀಸ್ ಸಂತ್ರಸ್ತ ಪ್ರದೇಶವಾಗಿದೆ. ಉಪ್ಪಿನಂಗಡಿ ಠಾಣೆಗೆ ಗ್ರಾಮಸ್ಥರು 18 ಕಿ.ಮೀ. ಹೆಚ್ಚು ದೂರದ ಪ್ರಯಾಣ ಮಾಡಬೇಕಾಗಿರುವುದು ಇನ್ನೊಂದು ಪ್ರಮುಖ ಅಡಚಣೆ.

ನೆಲ್ಯಾಡಿ ಭಾಗದಲ್ಲಿ ಶೇ.41ರಷ್ಟು ಕ್ರಿಮಿನಲ್ ಪ್ರಕರಣಗಳು:
ಉಪ್ಪಿನಂಗಡಿ ಠಾಣೆಯ ಪಿಎಸ್‌ಐ (ತನಿಖೆ–1) ಗುರುನಾಥ್ ಹಾದಿಮನಿ ಅವರು ಸಭೆಯಲ್ಲಿ ಮಾತನಾಡಿ, “ಉಪ್ಪಿನಂಗಡಿ ಠಾಣೆಗೆ ಒಳಪಡುವ 22 ಗ್ರಾಮಗಳಲ್ಲಿ ನೆಲ್ಯಾಡಿ ಹೊರಠಾಣೆ ವ್ಯಾಪ್ತಿಯ 7 ಗ್ರಾಮಗಳಲ್ಲಿ ಮಾತ್ರವೇ ಶೇ.41ರಷ್ಟು ಕ್ರಿಮಿನಲ್ ಪ್ರಕರಣಗಳು ಸಂಭವಿಸುತ್ತಿವೆ. ಹೊಸ ಪೊಲೀಸ್ ಠಾಣೆ ಸ್ಥಾಪನೆಗೆ ಪ್ರಕರಣಗಳ ಪ್ರಮಾಣ ಮತ್ತು ಜನಸಂಖ್ಯೆ ಎರಡೂ ಸಮರ್ಪಕವಾಗಿವೆ,” ಎಂದರು. ಈ ಎಲ್ಲ ವಿವರಗಳನ್ನು ಹಾಗೂ ಸಾರ್ವಜನಿಕ ಸಭೆಯಲ್ಲಿ ಸಂಗ್ರಹಿಸಿದ ಅಭಿಪ್ರಾಯಗಳನ್ನು ಆಧರಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು.

ಜಾಗ ಸಿದ್ಧ – ಗ್ರಾಮಸ್ಥರಿಂದ ನಿರಂತರ ಬೇಡಿಕೆ:
ಕೌಕ್ರಾಡಿ ಗ್ರಾ.ಪಂ. ಪಿಡಿಒ ದೇವಿಕಾ ಅವರು ಮಾತನಾಡಿ, “ನೆಲ್ಯಾಡಿಯಲ್ಲಿ ಪೊಲೀಸ್ ಠಾಣೆ ಕಟ್ಟಡಕ್ಕಾಗಿ ಸ್ಥಳವನ್ನು ಈಗಾಗಲೇ ಮೀಸಲಿರಿಸಲಾಗಿದೆ. ಪ್ರತಿಯೊಂದು ಗ್ರಾಮಸಭೆಯಲ್ಲಿಯೂ ಈ ಬಗ್ಗೆ ನಿರಂತರ ಬೇಡಿಕೆ ಬಂದಿದೆ. ಈಗಾಗಲೇ ಈ ಭಾಗದ ಪರಿಸ್ಥಿತಿಯನ್ನು ನಿಜವಾಗಿ ಪರಿಶೀಲಿಸಿದರೆ, ಆದ್ದರಿಂದ ಆದಷ್ಟೂ ಶೀಘ್ರ ನೆಲ್ಯಾಡಿಯಲ್ಲಿ ಪೂರ್ಣಪ್ರಮಾಣದ ಪೊಲೀಸ್ ಠಾಣೆ ಆಗಬೇಕೆಂದು ಹೇಳಿದರು.

ಸಭೆಯಲ್ಲಿ ಜಿ.ಪಂ. ಮಾಜಿ ಸದಸ್ಯ ಪಿ.ಪಿ. ವರ್ಗೀಸ್, ಸರ್ವೋತ್ತಮ ಗೌಡ, ತಾ.ಪಂ. ಮಾಜಿ ಸದಸ್ಯೆ ಉಷಾ ಅಂಚನ್ ನೆಲ್ಯಾಡಿ, ಆಶಾ ಲಕ್ಷ್ಮಣ್ ಗುಂಡ್ಯ, ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್, ಸದಸ್ಯ ರವಿಪ್ರಸಾದ್ ಶೆಟ್ಟಿ, ಪುತ್ತೂರು ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಅನಿಲ, ಕೆಡಿಪಿ ಸದಸ್ಯ ಗಿರೀಶ್ ಬದನೆ, ತಾ.ಗ್ಯಾರಂಟಿ ಸಮಿತಿ ಸದಸ್ಯ ಸತೀಶ್ ಇಚ್ಲಂಪಾಡಿ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಭಿಲಾಷ್ ಪಿ.ಕೆ., ಶಿರಾಡಿ ಗ್ರಾ.ಪಂ. ಅಧ್ಯಕ್ಷ ಕಾರ್ತಿಕೇಯನ್, ಸದಸ್ಯ ಎಂ.ಕೆ. ಪೌಲೋಸ್, ಕೌಕ್ರಾಡಿ ಗ್ರಾ.ಪಂ. ಸದಸ್ಯ ಕೆ.ಎಂ. ಹನೀಫ್, ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ರವಿಪ್ರಸಾದ್ ಗುತ್ತಿನಮನೆ, ವರ್ತಕ ಸಂಘದ ಅಧ್ಯಕ್ಷ ಸತೀಶ್ ದುರ್ಗಾಶ್ರೀ, ಉಪಾಧ್ಯಕ್ಷ ಗಣೇಶ್ ರಶ್ಮಿ, ಹಾಗೂ ಪ್ರಮುಖರಾದ ಜಾರ್ಜ್‌ಕುಟ್ಟಿ ಉಪದೇಶಿ, ಇಂಜಿನಿಯರ್ ಮನೋಜ್, ವರ್ಗೀಸ್ ಅಬ್ರಹಾಂ, ಅಬ್ದುಲ್ಲಾಕುಂಞಿ ಕೊಂಕೋಡಿ, ಇಸ್ಮಾಯಿಲ್ ಕೋಲ್ಪೆ, ಜಾನ್ಸನ್ ಗಲ್ಬಾವೋ ಕೊಕ್ಕಡ, ಇಲ್ಯಾಸ್ ಕೌಕ್ರಾಡಿ, ಮಹಮ್ಮದ್ ರಫೀಕ್ ಕೊಣಾಲು ಮತ್ತಿತರರು ಸಲಹೆ ಸೂಚನೆಗಳನ್ನು ನೀಡಿದರು.

ಸಭೆಯ ಸ್ವಾಗತ ಮತ್ತು ನಿರೂಪಣೆಯನ್ನು ಕೌಕ್ರಾಡಿ ಗ್ರಾ.ಪಂ.ಸದಸ್ಯ ಲೋಕೇಶ್ ಬಾಣಜಾಲು ನೆರವೇರಿಸಿದರು. ಉಪ್ಪಿನಂಗಡಿ ಠಾಣೆಯ ಪಿಎಸ್‌ಐ (ತನಿಖೆ–2) ಕೌಶಿಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಠಾಣೆ ಬರಹಗಾರ ಸತೀಶ್, ನೆಲ್ಯಾಡಿ ಹೊರಠಾಣೆ ಹೆಡ್‌ಕಾನ್‌ಸ್ಟೇಬಲ್‌ಗಳಾದ ಪ್ರವೀಣ್, ದಯಾನಂದ, ಉಪ್ಪಿನಂಗಡಿ ಠಾಣೆ ಕಾನ್‌ಸ್ಟೇಬಲ್‌ಗಳಾದ ಸದಾಶಿವ ದೊಡಮನಿ, ನಾಗರಾಜ್ ಸಹಕರಿಸಿದರು.

  •  

Leave a Reply

error: Content is protected !!