

ನೆಲ್ಯಾಡಿ: 79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನೆಲ್ಯಾಡಿ ಗಾಂಧಿ ಮೈದಾನದಲ್ಲಿ ವಿಶ್ವ ವಿದ್ಯಾಲಯ ಕಾಲೇಜು, ಗ್ರಾಮ ಪಂಚಾಯತ್, ನೆಲ್ಯಾಡಿ ವರ್ತಕರ ಸಂಘ ಹಾಗೂ ಜೆಸಿಐ ನೆಲ್ಯಾಡಿ ಸಂಯೋಜನೆಯಲ್ಲಿ ಕಾರ್ಯಕ್ರಮ ಜರುಗಿತು.
ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ನಂತರ ಗ್ರಾಮ ಪಂಚಾಯತ್ ಅಧ್ಯಕ್ಷ ಸಲಾಂ ಬಿಲಾಲ್ ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ನೆನಪಿಸಿಕೊಂಡ ಅವರು, ದೇಶದ ಅಭಿವೃದ್ಧಿ ಮತ್ತು ಪ್ರಗತಿಯಲ್ಲಿ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಬೇಕೆಂದು ಕರೆ ನೀಡಿದರು.
ವಿವಿ ಕಾಲೇಜು ಉಪನ್ಯಾಸಕ ಡಾ.ಸೀತಾರಾಮ.ಪಿ ಮತ್ತು ವರ್ತಕರ ಸಂಘದ ಅಧ್ಯಕ್ಷ ಸತೀಶ್ ದುರ್ಗಾಶ್ರೀ ಅವರು ದೇಶದ ಐಕ್ಯತೆ, ಸ್ವಾತಂತ್ರ್ಯದ ಮಹತ್ವ ಹಾಗೂ ಪ್ರಸ್ತುತ ಸಮಾಜದಲ್ಲಿ ಯುವಕರ ಪಾತ್ರ ಕುರಿತು ಮಾತನಾಡಿದರು.
ಪಂಚಾಯತ್ ಸಿಬ್ಬಂದಿ ಶಿವಪ್ರಸಾದ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಿಂದ ಧ್ವಜಗೀತೆ, ವಂದೇ ಮಾತರಂ, ಜನಗಣಮನ ಗಾಯನ ನಡೆಯಿತು. ಪಂಚಾಯತ್ ಕಾರ್ಯದರ್ಶಿ ಅಂಗು ವಂದಿಸಿದರು.
ಈ ಸಂದರ್ಭದಲ್ಲಿ ಪಂಚಾಯತ್ ಹಾಗೂ ಜೆಸಿಐ ಸದಸ್ಯರು, ವಿವಿ ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಪಂಚಾಯತ್ ವತಿಯಿಂದ ಭಾಗವಹಿಸಿದ ಎಲ್ಲರಿಗೂ ಸಿಹಿ ವಿತರಿಸಲಾಯಿತು.











