

ನೆಲ್ಯಾಡಿ: ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯ ವತಿಯಿಂದ ಉಚಿತ ಎಲುಬಿನ ಖನಿಜ ಸಾಂದ್ರತೆ ಪರೀಕ್ಷಾ ಶಿಬಿರ ಹಾಗೂ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅ.10ರಂದು ಜರುಗಿತು.

ಕಾರ್ಯಕ್ರಮವನ್ನು ಜಯಾನಂದ ಬಂಟ್ರಿಯಾಲ್ ಅವರು ಉದ್ಘಾಟಿಸಿ, ಅಶ್ವಿನಿ ಆಸ್ಪತ್ರೆ ನಡೆಸುತ್ತಿರುವ ಸಾಮಾಜಿಕ ಆರೋಗ್ಯಮುಖಿ ಶಿಬಿರಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಶುಭಹಾರೈಸಿದರು.

ಶಿಬಿರವನ್ನು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಶಮಂತ್ ವೈ.ಕೆ ಅವರ ಮಾರ್ಗದರ್ಶನದಲ್ಲಿ ಅಲೆಂಬಿಕ್ ಫಾರ್ಮಾ ಕಂಪನಿಯ ಸಹಯೋಗದಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಕಂಪನಿಯ ಪ್ರತಿನಿಧಿಗಳಾದ ಪೃಥ್ವಿರಾಜ್ ಹಾಗೂ ಅಬ್ರಾರ್ ಅವರು ಶಿಬಿರಕ್ಕೆ ಆಗಮಿಸಿದ ನಾಗರಿಕರಿಗೆ ಉಚಿತ ಎಲುಬಿನ ಖನಿಜ ಸಾಂದ್ರತೆ ಪರೀಕ್ಷೆಯನ್ನು ನಡೆಸಿಕೊಟ್ಟರು.
ಆಸ್ಪತ್ರೆಯ ಸಹಾಯಕ ವೈದ್ಯಕೀಯ ನಿರ್ದೇಶಕಿ ಮಾನಸಿಕ ಆರೋಗ್ಯದ ಮಹತ್ವ ಹಾಗೂ ಅದರ ಸಂರಕ್ಷಣೆ ಕುರಿತು ಡಾ.ಸುಧಾ ವೈ.ಕೆ ಅವರು ಮಾಹಿತಿ ಪೂರ್ಣ ಉಪನ್ಯಾಸ ನೀಡಿದರು. ಡಾ.ಶಮಂತ್ ವೈ.ಕೆ ಮಾತನಾಡಿ ಅವರು ದೇಹದಲ್ಲಿನ ಎಲುಬು ಮತ್ತು ಕೀಲುವಿನ ಆರೋಗ್ಯ ಕಾಪಾಡುವ ವಿಧಾನಗಳ ಕುರಿತು ನಾಗರಿಕರಿಗೆ ಜಾಗೃತಿ ಮೂಡಿಸಿದರು.
ಆಸ್ಪತ್ರೆಯ ವೈದಕೀಯ ನಿರ್ದೇಶಕ ಡಾ.ಮುರಳೀಧರ ವೈ.ಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಶಿಬಿರಕ್ಕೆ ಸ್ಪಂದಿಸಿದ ನಾಗರಿಕರಿಗೆ ಧನ್ಯವಾದ ತಿಳಿಸಿ, ಮುಂದಿನ ದಿನಗಳಲ್ಲಿ ನಾಗರಿಕರ ಆರೋಗ್ಯ ಕಾಳಜಿಗೆ ಸಂಬಂಧಿಸಿದ ಇನ್ನೂ ಅನೇಕ ಶಿಬಿರಗಳನ್ನು ಆಯೋಜಿಸುವ ಭರವಸೆ ನೀಡಿದರು.
ಸಿಬ್ಬಂದಿ ಯೋಗಿನಿ ಸ್ವಾಗತಿಸಿದರು. ಆಸ್ಪತ್ರೆಯ ಮ್ಯಾನೇಜರ್ ಜಾನ್ಸನ್ ಅವರು ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಶ್ರದ್ಧಾ ವಂದಿಸಿದರು.
ನೂರಕ್ಕೂ ಹೆಚ್ಚು ಮಂದಿ ನಾಗರಿಕರು ಶಿಬಿರದ ಪ್ರಯೋಜನ ಪಡೆದುಕೊಂಡರು.






