

ನೆಲ್ಯಾಡಿ: ಪಡುಬೆಟ್ಟಿನಲ್ಲಿ ಹೊಸದಾಗಿ ಸ್ಥಾಪಿತವಾದ ಸೌಹಾರ್ದ ಫ್ರೆಂಡ್ಸ್ ಕ್ಲಬ್ನ ಉದ್ಘಾಟನೆ ಹಾಗೂ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ರೋಟರಿ ಕ್ಲಬ್ ಪುತ್ತೂರು ಇವರ ಸಹಯೋಗದಲ್ಲಿ ಆಯೋಜಿಸಲಾದ ರಕ್ತದಾನ ಶಿಬಿರ ಪಡುಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನೆರವೇರಿತು.
ಕಾರ್ಯಕ್ರಮದಲ್ಲಿ ಸೌಹಾರ್ದ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಹನೀಫ್ ಝಮ್ ಝಮ್ ಅಧ್ಯಕ್ಷತೆ ವಹಿಸಿದರು. ಗೌರವಾಧ್ಯಕ್ಷರಾಗಿ ಮಹಾಲಿಂಗ ಕೆ ಉಪಸ್ಥಿತರಿದ್ದು, ಪ್ರಸ್ತಾವಿಕವಾಗಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ನೆಲ್ಯಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸಲಾಂ ಬಿಲಾಲ್, ರೋಟರಿ ಕ್ಲಬ್ ಪುತ್ತೂರುನ ವೈದ್ಯರಾದ ಡಾ. ಸೀತಾರಾಮ ಭಟ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗಂಗಾಧರ ಶೆಟ್ಟಿ ಹೊಸಮನೆ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಉಮೇಶ್ ಗೌಡ, ಉಪಾಧ್ಯಕ್ಷ ರಫೀಕ್ ಉಳಿತೊಟ್ಟು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರವಿಚಂದ್ರ, ಪ್ರೌಢಶಾಲೆಯ ದೈಹಿಕ ಶಿಕ್ಷಕ ಕುಶಾಲಪ್ಪ, ಸಾಮಾಜಿಕ ಕಾರ್ಯಕರ್ತರು ಹೆರಾಲ್ಡ್ ಡಿಸೋಜ, ಸೀತಾರಾಮ ಕಾನಮನೆ, ಕಬೀರ್ ತಾಜ್ ಉಪಸ್ಥಿತರಿದ್ದು, ಸಂಸ್ಥೆಯ ಕಾರ್ಯಾರಂಭಕ್ಕೆ ಹಾರೈಸಿದರು.
ಕಾರ್ಯಕ್ರಮದ ಅಂಗವಾಗಿ ನಡೆದ ರಕ್ತದಾನ ಶಿಬಿರದಲ್ಲಿ ಅನೇಕ ಯುವಕರು ಹಾಗೂ ಸ್ಥಳೀಯರು ಉತ್ಸಾಹದಿಂದ ರಕ್ತದಾನದಲ್ಲಿ ಪಾಲ್ಗೊಂಡರು. ಸಾಮಾಜಿಕ ಹಿತದೃಷ್ಟಿಯಿಂದ ಯುವಕರಲ್ಲಿ ಸೇವಾ ಮನೋಭಾವ ಬೆಳೆಸುವ ಉದ್ದೇಶದಿಂದ ಆಯೋಜಿಸಲಾದ ಈ ಶಿಬಿರ ಮೆಚ್ಚುಗೆಗೆ ಪಾತ್ರವಾಯಿತು.
ಕಾರ್ಯದರ್ಶಿ ಸಮೀರುದ್ದೀನ್ ಪಡುಬೆಟ್ಟು ಸ್ವಾಗತಿಸಿದರು. ಕೋಶಾಧಿಕಾರಿ ತೌಫಿಕ್ ಪಡುಬೆಟ್ಟು ವಂದಿಸಿದರು. ಸಿನಾನ್ ಪಡುಬೆಟ್ಟು ಕಾರ್ಯಕ್ರಮ ನಿರೂಪಿಸಿದರು.






