


ಕೊಕ್ಕಡ: ಭಕ್ತ ಮಹಾಜನರ ಸಹಕಾರದೊಂದಿಗೆ, ಪ್ರಸಿದ್ಧ ಸೌತಡ್ಕ ಶ್ರೀ ಮಹಾಗಣಪತಿ ದೇವರ ಸನ್ನಿಧಿಯಲ್ಲಿ ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ಜ.22ರಂದು 108 ಕಾಯಿ ಗಣಹೋಮ ಹಾಗೂ ಮೂಡಪ್ಪ ಸೇವೆ ಭಕ್ತಿಭಾವದಿಂದ ನಡೆಯಲಿದೆ ಎಂದು ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ, ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಎಸ್.ಜೆ. ಯೇಸುದಾಸ್ ಹಾಗೂ ಸಮಿತಿ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಿಗ್ಗೆ 8 ಗಂಟೆಯಿಂದ 108 ಕಾಯಿ ಗಣಹೋಮ ಹಾಗೂ ಅಥರ್ವಶೀರ್ಷಾಭಿಷೇಕ, ಮಧ್ಯಾಹ್ನ 12.15ಕ್ಕೆ ಮಹಾಪೂಜೆ, 12.30ಕ್ಕೆ ಪಲ್ಲಪೂಜೆ, ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಕಾರ್ಯಕ್ರಮಗಳ ನಂತರ ರಾತ್ರಿ 7.30ರಿಂದ ಮೂಡಪ್ಪ ಸೇವೆ, 9 ಗಂಟೆಗೆ ಮಹಾಮಂಗಳಾರತಿ, ಪ್ರಸಾದ ವಿತರಣೆ ಹಾಗೂ ನಂತರ ಅನ್ನಸಂತರ್ಪಣೆ ಆಯೋಜಿಸಲಾಗಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳು
ಬೆಳಿಗ್ಗೆ 8ರಿಂದ ಮಧ್ಯಾಹ್ನ 12ರವರೆಗೆ ವಾಮನ್ ನಾಯಕ್ ಉಪ್ಪಿನಂಗಡಿ ಇವರ ಸಂಯೋಜನೆಯಲ್ಲಿ ವಿವಿಧ ಆಸಕ್ತ ಭಜನಾ ತಂಡಗಳಿಂದ ಭಜನಾ ಸೇವೆ ನಡೆಯಲಿದೆ. ಸಾಯಂಕಾಲ 5.30ರಿಂದ 6.30ರವರೆಗೆ ಶ್ರೀ ಕ್ಷೇತ್ರ ಸೌತಡ್ಕದ ಶಿಶುಮಂದಿರದ ಪುಟಾಣಿಗಳಿಂದ ‘ಚಿಣ್ಣರ ಚಿಲಿಪಿಲಿ’ ಕಾರ್ಯಕ್ರಮ ನಡೆಯಲಿದೆ. 6.30ರಿಂದ 8.30ರವರೆಗೆ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗಾಯಕ ಪುತ್ತೂರು ಚಂದ್ರಶೇಖರ ಹೆಗ್ಡೆ ಅವರ ನಿರ್ದೇಶನದ ಪುನೀತ್ ಆರ್ಕೆಸ್ಟ್ರಾ, ಪುತ್ತೂರು ಇವರಿಂದ ಭಕ್ತಿ ಸಿಂಚನ, ಸುಗಮ ಸಂಗೀತ, ಭಕ್ತಿ ಹಾಗೂ ಭಾವ ತತ್ವ ಪದಗಳ ಗೀತಾಸಂಗಮ ನಡೆಯಲಿದೆ. ಇದೇ ವೇಳೆ, ರಾತ್ರಿ 9.30ರಿಂದ ತುಳು ರಂಗಭೂಮಿಯ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಕ್ಷುದ್ರ ಶಕ್ತಿಯೊಂದರ ಭಯಾನಕ ಕಥೆಯನ್ನು ಆಧರಿಸಿದ, ಅದ್ದೂರಿ ರಂಗ ವಿನ್ಯಾಸ ಹಾಗೂ ಎಲ್ಇಡಿ ಹೊಸ ತಂತ್ರಜ್ಞಾನ ಬಳಸಿಕೊಂಡು ನರೇಶ್ ಕುಮಾರ್ ಸಸಿಹಿತ್ಲು ನಿರ್ದೇಶನದ ‘ಬ್ರಹ್ಮ ರಕ್ಕಸ’ ತುಳು ನಾಟಕ ಪ್ರದರ್ಶನಗೊಳ್ಳಲಿದೆ.






