





ಕೊಕ್ಕಡ: ದಕ್ಷಿಣ ಕನ್ನಡ ಜಿಲ್ಲಾ 28ನೇ ಕನ್ನಡ ಸಾಹಿತ್ಯ ಸಮ್ಮೇಳನವು ಬಿ.ಸಿ.ರೋಡ್ನ ಸ್ಪರ್ಶ ಕಲಾ ಮಂದಿರದಲ್ಲಿ ಸಮ್ಮೇಳನಾಧ್ಯಕ್ಷರಾದ ಚಿದಂಬರ ಬೈಕಂಪಾಡಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮಾ.27ರಂದು ನಡೆದ ಕಾರ್ಯಕ್ರಮದಲ್ಲಿ ತುಳು ಹಾಗೂ ಕನ್ನಡ ವಿದ್ವಾಂಸರು, ವಿಶ್ರಾಂತ ಕುಲಪತಿ ಪ್ರೊಫೆಸರ್ ಚಿನ್ನಪ್ಪ ಗೌಡ ಅವರು ಹಲವಾರು ನೂತನ ಕೃತಿಗಳನ್ನು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಪೆರ್ಲ ಖಂಡಿಗ ನಿವಾಸಿ ಸಂಜೀವ ಶೆಟ್ಟಿಗಾರ್ ಮತ್ತು ಗೀತಾ ಎಸ್. ಶೆಟ್ಟಿಗಾರ್ ಅವರ ಪುತ್ರಿ ಕು.ಸಂಪ್ರೀತ ಎಸ್. ಶೆಟ್ಟಿಗಾರ್ ರಚಿಸಿರುವ “ಅಂತಾರಾಳದ ಧ್ವನಿ” ಕೃತಿಯೂ ಅಧಿಕೃತವಾಗಿ ಬಿಡುಗಡೆಗೊಂಡಿತು.
ಸಾಹಿತ್ಯಾಭಿಮಾನಿಗಳ ಗಮನ ಸೆಳೆದ ಈ ಕೃತಿ, ಯುವ ಲೇಖಕಿಯಾಗಿ ಸಂಪ್ರೀತ ಅವರ ಪ್ರತಿಭೆಯನ್ನು ಮೆರೆದಿದೆ. ಇವರು ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಪ್ರಥಮ ವರ್ಷದ ಬಿ.ಸಿ.ಎ ವಿದ್ಯಾರ್ಥಿನಿಯಾಗಿದ್ದು, ಕಲೆ ಹಾಗೂ ಸಾಹಿತ್ಯ ಕ್ಷೇತ್ರಗಳ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದಾರೆ.





